ನಾಗ್ರಾಜ್ ಮಂಜುಳೆ, (ಮರಾಠಿ: नागराज मंजुळे) ಒಬ್ಬ ಭಾರತೀಯ ಚಿತ್ರನಿರ್ಮಾಪಕ, ಲೇಖಕ, ಮತ್ತು ಅವರ ಮೊದಲ ಕಿರು ಚಿತ್ರ 'ಪಿಸ್ತುಲ್ಯ' ಹಾಗು ಮರಾಠಿ ಸೂಪರ್ ಹಿಟ್ ಸಿನೆಮಾ 'ಸೈರಾಟ್' ನಿರ್ಮಾಣಕ್ಕೆ ಹೆಸರುವಾಸಿಯಾಗಿದ್ದಾರೆ. ಒಂದು ಮರಾಠಿಯ ಕವಿತಾ ಪುಸ್ತಕ 'ಉನ್ಹ್ಯಾಚ್ಯ ಕಟಾವಿರುದ್ಧ'(उन्हाच्या कटाविरुध्) ಪ್ರಕಟಿಸಿದ್ದಾರೆ ಹಾಗು ಆ ಕವಿತಾ ಪುಸ್ತಕಕ್ಕಾಗಿ ಭೈರುರತನ್ ದಮಾನಿ ಸಾಹಿತ್ಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. == ವಿದ್ಯಾಭ್ಯಾಸ == ಮರಾಠಿ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪುಣೆಯ ಜ್ಯೋತಿಬಾ ಫುಲೆ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ಇಷ್ಟಲ್ಲದೆ ಅಹ್ಮದ್ ನಗರದ ಕಲಾ, ವಿಜ್ಞಾನ ಹಾಗು ವಾಣಿಜ್ಯ ಕಾಲೇಜಿನಿಂದ ಸಂವಹನ ಅಧ್ಯಯನ ವಿಚಾರದಲ್ಲಿ ಮತ್ತೊಂದು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. == ಚಿತ್ರನಿರ್ಮಾಣ ಕಾರ್ಯ == 'ಪಿಸ್ತುಲ್ಯಾ', ಕಿರುಚಿತ್ರ ನಿರ್ಮಾಣಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡ ಅನುಭವದ ಮೇಲೆ ಅವರು ತಮ್ಮ ಚಲನಚಿತ್ರ ನಿರ್ಮಾಣ ಕೃಷಿಯನ್ನು ಮುಂದುವರೆಸಿದರು. ಇವರ ಮೊದಲ ಪೂರ್ಣ ಪ್ರಮಾಣದ ಚಲನಚಿತ್ರ ಮರಾಠಿಯ 'ಫ್ಯಾನ್ದ್ರಿ' ೨೦೧೪ರ ಫೆಬ್ರವರಿಯಲ್ಲಿ ಬಿಡುಗಡೆಯಾಗಿದೆ. ಇದೇ ಸಿನೆಮಾ ಭಾರತಕ್ಕಿಂತಲೂ ಮೊದಲು ವಿದೇಶಗಳಲ್ಲಿ ಅಂತಾರಾಷ್ಟ್ರೀಯ ಸಿನೆಮಾ ಸಂಬಂಧಿ ಕಾರ್ಯಕ್ರಮಗಳಲ್ಲಿ ಪ್ರದರ್ಶನ ಕಂಡಿತ್ತು ಹಾಗು ಅಂತಾರಾಷ್ಟ್ರೀಯ ಫಿಲಂ ಫೆಡರೇಶನ್ ವಿಚಾರ ಕಮ್ಮಟದಲ್ಲಿ ೨೦೧೩ರ ಅತ್ಯುತ್ತಮ ಚಲನ ಚಿತ್ರ ಎಂಬ ಪ್ರಶಸ್ತಿಗೆ ಭಾಜನವಾಯಿತು. ಇವರ ಎರಡನೇ ಚಿತ್ರ, ಸೈರಾಟ್, ೬೬ ನೆಯ ಬರ್ಲಿನ್ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರೀಮಿಯರ್ ಶೋ ಕಂಡಿತು. ಹಾಗು ೧೦೦ ವರ್ಷಗಳನ್ನು ಪೂರೈಸುವ ಹೊಸ್ತಿಲಲ್ಲಿದ್ದ ಮರಾಠಿ ಸಿನೆಮಾ ರಂಗದ ಅತೀ ಹೆಚ್ಚು ಆದಾಯ ಗಳಿಸಿದ ಸಿನೆಮಾವಾಯಿತು. ಮರಾಠಿಯ ಖ್ಯಾತ ನಟ ನಾನಾ ಪಾಟೇಕರ್ ನಟಿಸಿದ 'ನಟ ಸಾಮ್ರಾಟ್' ಸಿನೆಮಾದ ದಾಖಲೆ ಮುರಿದು ಗಲ್ಲಾ ಬಾಕ್ಸ್ ಆಫೀಸ್ ನಲ್ಲಿ ಅತೀ ಹೆಚ್ಚು ಹಣ ಗಳಿಸಿದ ಮರಾಠಿ ಸಿನಿಮಾವಾಗಿ ಹೊರಹೊಮ್ಮಿದ್ದು ಸೈರಾಟ್ ಚಿತ್ರದ ವಿಶೇಷ. == ಜೀವನ == ನಾಗ್ರಾಜ್ ಮಂಜುಳೆ . ದಕ್ಷಿಣ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಕರ್ಮಾಳಾ ತಾಲೂಕಿನ ಜೇವೂರ್ ಗ್ರಾಮದಲ್ಲಿ ಹುಟ್ಟಿ ಬೆಳೆದ ನಾಗರಾಜ್ ಮಂಜುಳೆ ೧೯೯೭ರಲ್ಲಿ ಅವರು ಹದಿನೆಂಟನೇ ವಯಸ್ಸಿನಲ್ಲಿದ್ದಾಗಲೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಮುಂದೆ ಹದಿನೈದು ವರ್ಷಗಳ ಸಾಂಸಾರಿಕ ಜೀವನ ನಡೆಸಿದ ನಂತರ ಸತಿ-ಪತಿಗಳ ಜೀವನದಲ್ಲಿ ವಿರಸ ಹುಟ್ಟಿ ೨೦೧೨ರಲ್ಲಿ ವಿವಾಹ ವಿಚ್ಛೇದನಕ್ಕೆ ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಮುಂದೆ ೨೦೧೪ರಲ್ಲಿ ನ್ಯಾಯಾಲಯದ ಸಮ್ಮತಿ ದೊರೆತು ಇದೀಗ ಪತ್ನಿಯಿಂದ ದೂರವಾಗಿದ್ದಾರೆ. == ಪ್ರಶಸ್ತಿಗಳು == ೬೧ನೆಯ ರಾಷ್ಟ್ರೀಯ ಸಿನೆಮಾ ಪ್ರಶಸ್ತಿಗಳಲ್ಲಿ 'ನಿರ್ದೇಶಕನ ಅತ್ಯುತ್ತಮ ಚೊಚ್ಚಲ ಚಿತ್ರ' ( 'ಫ್ಯಾನ್ದ್ರಿ' ಸಿನೆಮಾಕ್ಕಾಗಿ) ದೊರೆತಿದೆ. 'ಫ್ಯಾನ್ದ್ರಿ' ಸಿನೆಮಾ ನಿರ್ದೇಶನಕ್ಕಾಗಿ ನ್ಯೂಯಾರ್ಕ್ ಭಾರತೀಯ ಸಿನೆಮಾ ಫೆಸ್ಟಿವಲ್ 'ಅತ್ಯುತ್ತಮ ನಿರ್ದೇಶಕ' ಪ್ರಶಸ್ತಿಯನ್ನು ಕೊಡಮಾಡಿದೆ. 'ಸೈರಾಟ್' ಸಿನೆಮಾದ ಯಶಸ್ಸಿಗೆ ಅಭಿಮಾನಿ ಸಂಘಟನೆಗಳು ಹಾಗು ಮಹಾರಾಷ್ಟ್ರ ಮುಖ್ಯಮಂತ್ರಿಗಳಾದ ದೇವೇಂದ್ರ ಜಿ. ಫಡ್ನವಿಸ್ ನಾಗರಾಜ್ ಮಂಜುಳೆಯವರನ್ನು ಗೌರವಿಸಿದ್ದಾರೆ. == ಉಲ್ಲೇಖಗಳು ==